ಬಾಲಮಂದಿರದಿಂದ ಪರಾರಿಯಾಗಿ ಕಳ್ಳತನ: 4 ಅಪ್ರಾಪ್ತರ ಬಂಧನ, ಪೋಷಕರ ವಿರುದ್ಧವೂ ಪ್ರಕರಣ ದಾಖಲು ಬಾಲಕರಿಂದ 4 ಲಕ್ಷ ರೂ. ಮೌಲ್ಯದ 30 ಗ್ರಾಂ ಚಿನ್ನದ ಸರ, 2 ದ್ವಿಚಕ್ರ ವಾಹನ ಹಾಗೂ 1 ಆಟೋರಿಕ್ಷಾ ವಶಕ್ಕೆ ಪಡೆಯಲಾಗಿದೆ. ಬೆಂಗಳೂರು: ಬಾಲಮಂದಿರದಿಂದ ತಪ್ಪಿಸಿಕೊಂಡು ಬಂದು ಮತ್ತೆ ಕಳ್ಳತನ ಮಾಡಿದ್ದ ನಾಲ್ವರು ಅಪ್ರಾಪ್ತರನ್ನು ಪೀಣ್ಯ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಈ ಸಂಬಂಧ ಅವರ ಪೋಷಕರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಿದ್ದಾರೆ.ಬಾಲಕರಿಂದ 4 ಲಕ್ಷ ರೂ. ಮೌಲ್ಯದ 30 ಗ್ರಾಂ ಚಿನ್ನದ ಸರ, 2 ದ್ವಿಚಕ್ರ ವಾಹನ ಹಾಗೂ 1 ಆಟೋರಿಕ್ಷಾ ವಶಕ್ಕೆ ಪಡೆಯಲಾಗಿದೆ.ಕೆಲ ದಿನಗಳ ಹಿಂದೆ ಕೆಂಪಯ್ಯ ಗಾರ್ಡನ್‌ ಬಳಿ ಮಹಿಳೆಯೊಬ್ಬರು ಬೆಳಗ್ಗೆ ಕೆಲಸಕ್ಕೆ ನಡೆದು ಹೋಗುತ್ತಿದ್ದಾಗ ದ್ವಿ-ಚಕ್ರ ವಾಹನದಲ್ಲಿ ಹಿಂಬಾಲಿಸಿದ ಬಾಲಕರು ಅಡ್ಡಗಟ್ಟಿ 30 ಗ್ರಾಂ ತೂಕದ ಚಿನ್ನದ ಸರ ಕಸಿದು ಪರಾರಿಯಾಗಿದ್ದರು.ಬಳಿಕ ಬ್ಯಾಡರಹಳ್ಳಿ ಪೊಲೀಸರು ಬಾಲಕರನ್ನು ಬಂಧಿಸಿ ಬಾಲ ನ್ಯಾಯ ಮಂಡಳಿಗೆ ಕಳುಹಿಸಿದ್ದರು. ಅಲ್ಲಿಂದ ತಪ್ಪಿಸಿಕೊಂಡಿದ್ದ ಬಾಲಕರು ಮರಳಿ ಅಪರಾಧ ಚಟುವಟಿಕೆಗಳನ್ನು ಮುಂದುವರಿಸಿದ್ದಾರೆ.ಈ ನಡುವೆ ಪ್ರಕರಣ ಸಂಬಂಧ ಬಾಲಕರ ಪೋಷಕರಿಗೂ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಮಕ್ಕಳ ಪಾಲನೆಯಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇರೆಗೆ ನಾಲ್ವರು ಬಾಲರ ಪೋಷಕರಿಗೆ ಬಾಲ ಅಪರಾಧ ನ್ಯಾಯಿಕ ಕಾಯ್ದೆಯಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.